ಬೆಂಗಳೂರು, ಜು. 23: ಕರ್ನಾಟಕ ಸರ್ಕಾರವು ರಸ್ತೆ ಅಪಘಾತಗಳು ಹಾಗೂ ವೈದ್ಯ-ಕಾನೂನು (Medico-Legal) ಪ್ರಕರಣಗಳಲ್ಲಿ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆ ಸಂಬಂಧಿಸಿದ ಮಹತ್ವದ ಸೌಲಭ್ಯಗಳನ್ನು ಸ್ಪಷ್ಟಪಡಿಸಿ ಅಧಿಕೃತ ಜ್ಞಾಪನ ಹೊರಡಿಸಿದೆ.
ಜ್ಞಾಪನದ ಪ್ರಕಾರ, ರಸ್ತೆ ಅಪಘಾತ ಸೇರಿದಂತೆ ವೈದ್ಯ-ಕಾನೂನು ಪ್ರಕರಣಗಳಲ್ಲಿ ಸರ್ಕಾರಿ ನೌಕರರು ಮತ್ತು ಅವರ ಅರ್ಹ ಅವಲಂಬಿತರು ಸರ್ಕಾರದ ಮಾನ್ಯತೆ ಪಡೆದ (Empanelled) ಹಾಗೂ ಮಾನ್ಯತೆ ಪಡೆಯದ (Non-Empanelled) ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚವನ್ನು 1963ರ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು ಮತ್ತು ಪೂರ್ವ ಪರಿಷ್ಕೃತ CGHS (2014) ದರಗಳಂತೆ ಮರುಪಾವತಿಸಿಕೊಳ್ಳಬಹುದು.
ಮರುಪಾವತಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ FIR, ನ್ಯಾಯಾಲಯದ ದಾಖಲೆಗಳು, Essentiality Certificate, ಅಗತ್ಯ ಅರ್ಜಿ ನಮೂನೆಗಳು, ಚೆಕ್ಲಿಸ್ಟ್ ದಾಖಲೆಗಳು ಹಾಗೂ ಸ್ವಯಂ-ಘೋಷಣೆ ಸಲ್ಲಿಸುವುದು ಕಡ್ಡಾಯವಾಗಿದೆ.
ಇದೇ ವೇಳೆ, ಸರ್ಕಾರದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಆಸ್ಪತ್ರೆ ನೀಡುವ ಅಂದಾಜು ವೆಚ್ಚದ ಆಧಾರದ ಮೇಲೆ ಅರ್ಹ ಮೊತ್ತದ ಶೇ.80ರಷ್ಟು ವೈದ್ಯಕೀಯ ಮುಂಗಡ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಮಾನ್ಯತೆ ಪಡೆಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಯಾವುದೇ ವೈದ್ಯಕೀಯ ಮುಂಗಡ ದೊರೆಯುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದಲ್ಲದೆ, ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾ ಸಂಸ್ಥೆ, MACT, ನ್ಯಾಯಾಲಯ ಅಥವಾ ಇತರೆ ಮೂಲಗಳಿಂದ ವೈದ್ಯಕೀಯ ವೆಚ್ಚದ ಪರಿಹಾರ ಪಡೆದರೆ, ಸರ್ಕಾರದಿಂದ ಪಡೆದಿರುವ ವೈದ್ಯಕೀಯ ಮರುಪಾವತಿ ಮೊತ್ತವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಹಿಂದಿರುಗಿಸಬೇಕು. ಈ ಕುರಿತು ಅರ್ಜಿದಾರರು ಸ್ವಯಂ-ಘೋಷಣೆ ಸಲ್ಲಿಸಬೇಕಿದ್ದು, ಸುಳ್ಳು ಮಾಹಿತಿ ನೀಡಿ ಎರಡು ಮೂಲಗಳಿಂದ ಪರಿಹಾರ ಪಡೆದಿರುವುದು ಕಂಡುಬಂದರೆ ಸಂಬಂಧಿತ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜ್ಞಾಪನದಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಆದೇಶವು ರಸ್ತೆ ಅಪಘಾತಗಳಲ್ಲಿ ಸಿಲುಕುವ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ನೆರವು ಪಡೆಯಲು ಮತ್ತಷ್ಟು ಸ್ಪಷ್ಟತೆ ಮತ್ತು ಅನುಕೂಲ ಕಲ್ಪಿಸುವ ಮಹತ್ವದ ಕ್ರಮವಾಗಿದೆ.
🥦 ಇದನ್ನೂ ಓದಿ (Also Read):