ಬೆಂಗಳೂರು, ಆಗಸ್ಟ್ 3: ರಸ್ತೆ ಅಪಘಾತ ಹಾಗೂ ಇತರೆ ವೈದ್ಯ-ಕಾನೂನು (Medico-Legal) ಪ್ರಕರಣಗಳಲ್ಲಿ ಗಾಯಗೊಂಡ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅರ್ಹ ಅವಲಂಬಿತರಿಗೆ ವೈದ್ಯಕೀಯ ವೆಚ್ಚದ ಮರುಪಾವತಿ ಹಾಗೂ ಮುಂಗಡ ಮಂಜೂರಾತಿ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಮಹತ್ವದ ಅಧಿಕೃತ ಜ್ಞಾಪನವನ್ನು ಹೊರಡಿಸಿದೆ.
ಈ ಆದೇಶದ ಮೂಲಕ ಅಪಘಾತ ಪ್ರಕರಣಗಳಲ್ಲಿ ನ್ಯಾಯಾಲಯದ ಅಂತಿಮ ತೀರ್ಪಿಗಾಗಿ ಕಾಯಬೇಕಾದ ಅನಿವಾರ್ಯತೆಯನ್ನು ತಪ್ಪಿಸಿ, ನೌಕರರಿಗೆ ಸಮಯೋಚಿತವಾಗಿ ವೈದ್ಯಕೀಯ ನೆರವು ದೊರಕುವಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ.
ವೈದ್ಯಕೀಯ ವೆಚ್ಚ ಮರುಪಾವತಿ
ರಸ್ತೆ ಅಪಘಾತ ಸೇರಿದಂತೆ ಮೆಡಿಕೋ-ಲೀಗಲ್ ಪ್ರಕರಣಗಳಲ್ಲಿ ಸರ್ಕಾರಿ ಮಾನ್ಯತೆ ಪಡೆದ (Empanelled) ಹಾಗೂ ಮಾನ್ಯತೆ ಪಡೆಯದ (Non-Empanelled) ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚ ಮರುಪಾವತಿಗೆ ಅರ್ಹತೆ ಇರುತ್ತದೆ.
ಮರುಪಾವತಿ ಮೊತ್ತವನ್ನು 1963ರ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳಡಿ, ಪೂರ್ವ ಪರಿಷ್ಕೃತ CGHS-2014 ದರಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
ಅರ್ಜಿ ಸಲ್ಲಿಸುವಾಗ FIR, ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದ ದಾಖಲೆಗಳು, Essentiality Certificate ಹಾಗೂ ನಿಗದಿತ ಸ್ವಯಂ-ಘೋಷಣೆ (Self Declaration) ಸಲ್ಲಿಸುವುದು ಕಡ್ಡಾಯವಾಗಿದೆ.
ವೈದ್ಯಕೀಯ ಮುಂಗಡ ಸೌಲಭ್ಯ
ಸರ್ಕಾರದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಆಸ್ಪತ್ರೆಯ ಅಂದಾಜು ವೆಚ್ಚದ ಆಧಾರದ ಮೇಲೆ CGHS-2014 ದರದಂತೆ ಅರ್ಹ ಮೊತ್ತದ ಶೇ.80ರಷ್ಟು ವೈದ್ಯಕೀಯ ಮುಂಗಡ ಮಂಜೂರು ಮಾಡಬಹುದು.
ಮಾನ್ಯತೆ ಪಡೆಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ಯಾವುದೇ ವೈದ್ಯಕೀಯ ಮುಂಗಡ ಸೌಲಭ್ಯ ಲಭ್ಯವಿರುವುದಿಲ್ಲ.
ಪರಿಹಾರ ಪಡೆದರೆ ಸರ್ಕಾರಕ್ಕೆ ಹಣ ಹಿಂದಿರುಗಿಸಬೇಕು
ನ್ಯಾಯಾಲಯದ ಅಂತಿಮ ತೀರ್ಪಿನ ನಂತರ ವಿಮಾ ಸಂಸ್ಥೆ, ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ (MACT) ಅಥವಾ ಇತರೆ ಯಾವುದೇ ಮೂಲದಿಂದ ವೈದ್ಯಕೀಯ ವೆಚ್ಚ ಅಥವಾ ಪರಿಹಾರ ಮೊತ್ತ ಪಡೆದರೆ, ಸರ್ಕಾರದಿಂದ ಪಡೆದ ವೈದ್ಯಕೀಯ ವೆಚ್ಚ ಮರುಪಾವತಿ ಮೊತ್ತವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಹಿಂದಿರುಗಿಸಬೇಕು.
ಸುಳ್ಳು ಮಾಹಿತಿ ನೀಡಿದರೆ ಕಠಿಣ ಕ್ರಮ
ಅರ್ಜಿದಾರರು ಪರಿಹಾರ ಪಡೆದಿರುವ ಅಥವಾ ಪಡೆಯಲಿರುವ ಬಗ್ಗೆ ಕಡ್ಡಾಯವಾಗಿ ಸ್ವಯಂ-ಘೋಷಣೆ ಸಲ್ಲಿಸಬೇಕು. ಸರ್ಕಾರದಿಂದಲೂ ಹಾಗೂ ಇತರೆ ಮೂಲಗಳಿಂದಲೂ ಒಂದೇ ವೆಚ್ಚಕ್ಕೆ ಪರಿಹಾರ ಪಡೆದು ಮೋಸ ಮಾಡಿರುವುದು ಕಂಡುಬಂದರೆ ಸಂಬಂಧಿಸಿದ ಸರ್ಕಾರಿ ನೌಕರರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟ ಎಚ್ಚರಿಕೆ ನೀಡಿದೆ.
ಈ ಹೊಸ ಮಾರ್ಗಸೂಚಿಯು ರಸ್ತೆ ಅಪಘಾತ ಹಾಗೂ ಮೆಡಿಕೋ-ಲೀಗಲ್ ಪ್ರಕರಣಗಳಲ್ಲಿ ಸರ್ಕಾರಿ ನೌಕರರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ, ವೇಗದ ಮತ್ತು ನಿಯಮಬದ್ಧಗೊಳಿಸುವ ಉದ್ದೇಶ ಹೊಂದಿದೆ.