ರಾಜ್ಯದ ಶಾಲೆಗಳಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸುವ ಬಗ್ಗೆ

ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಹಾಗೂ ಇನ್ನಿತರ ಪ್ರಮುಖ ಜಯಂತಿಗಳನ್ನು ಕಡ್ಡಾಯವಾಗಿ ಆಯಾ ದಿನಗಳಂದು ಗೌರವ ಪೂರ್ವಕವಾಗಿ ಆಚರಿಸತಕ್ಕದ್ದು

ಪ್ರತಿ ವರ್ಷ ನವೆಂಬರ್ 14 ರಂದು, ಭಾರತದ ಪ್ರಥಮ ಪ್ರಧಾನ ಮಂತ್ರಿಗಳಾದ ಪಂಡಿತ ಜವಾಹರ್ ಲಾಲ್ ನೆಹರುರವರ ಜಯಂತಿಯ ನಿಮಿತ್ತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ನವಂಬರ್ 14, ಮಂಗಳವಾರ ಆಚರಿಸಬೇಕಾದ ಮಕ್ಕಳ ದಿನಾಚರಣೆಯ ದಿನದಂದು ಬಲಿಪಾಡ್ಯಮಿ – ದೀಪಾವಳಿಯ ಪ್ರಯುಕ್ತ ಸಾರ್ವತ್ರಿಕ ರಜೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಈ ಸಾಲಿನ ಮಕ್ಕಳ ದಿನಾಚರಣೆಯನ್ನು ನಂತರದ ಶಾಲಾ ದಿನದಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವುದು ಅತ್ಯಗತ್ಯವಾಗಿರುತ್ತದೆ.

ಮಕ್ಕಳ ದಿನಾಚರಣೆಯು ಕೇವಲ ಸಾಂಕೇತಿಕ ಆಚರಣೆಯಲ್ಲ, ಇದು ದೇಶದ ಭವಿಷ್ಯತ್ತನ್ನ ರೂಪಿಸುವಲ್ಲಿ ಅತ್ಯಂತ ಮಹತ್ತರವಾದ ಆಚರಣೆಯಾಗಿದೆ. ನವೆಂಬರ್ ನಂತರದ ಶಾಲಾ ಕರ್ತವ್ಯದ ದಿನದಂದು, ಶಾಲಾ ಪ್ರಾರ್ಥನಾ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ರಾಜ್ಯದ ಎಲ್ಲಾ ಶಾಲಾ ಶಿಕ್ಷಕರು ಕ್ರಮವಹಿಸತಕ್ಕದ್ದು.

ಶಾಲೆಗಳಲ್ಲಿ, ಮಕ್ಕಳ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಟೋಟಗಳು, ಪ್ರಬಂಧ ಬರವಣಿಗೆ, ಭಾಷಣ, ಚಿತ್ರಕಲೆ, ಕೋಲಾಜ್ ಮೇಕಿಂಗ್, ಪಾತ್ರಾಭಿನಯ, ಸ್ವರಚಿತ ಕವನ, ಪತ್ರ ಲೇಖನ ಛದ್ಮ ವೇಷ, ಆಶು ಭಾಷಣ, ಸಮೂಹ ಗಾಯನ, ಚರ್ಚಾ ಸ್ಪರ್ಧೆ, ಘೋಷಣಾ ವಾಕ್ಯ ಬರೆಯುವುದು, ಮುಂತಾದ ಚಟುವಟಿಕೆಗಳನ್ನು ಶಾಲಾ ಪಾಠ ಪ್ರವಚನಗಳಿಗೆ ತೊಂದರೆ ಉಂಟಾಗದಂತೆ ನಿರ್ವಹಿಸುವುದು.

ಶಾಲಾ ಮುಖ್ಯ ಶಿಕ್ಷಕರು ಶಾಲಾ ಎಸ್.ಡಿ.ಎಂ.ಸಿ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ, ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ, ಹಬ್ಬದ ರೀತಿಯಲ್ಲಿ ಆಚರಣೆ ಮಾಡುವುದು..

ಈ ಬಗ್ಗೆ ರಾಜ್ಯದ ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಡಯಟ್ ಪ್ರಾಂಶುಪಾಲರು ತಮ್ಮ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ/ಪ್ರೌಢಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸುವಂತೆ ಕ್ರಮವಹಿಸಲು ತಿಳಿಸಿದೆ.

Sharing Is Caring:

Leave a Comment