ಮಾನ್ಯ ಶಿಕ್ಷಣ ಸಚಿವರೊಂದಿಗೆ ಶಿಕ್ಷಕರ ಸಂಘದ ಸಭೆಯಲ್ಲಿ ಚರ್ಚಿಸಿದ ಪ್ರಮುಖ ವಿಷಯಗಳು

ಮಾನ್ಯ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರ ಜೊತೆ ಪ್ರಾಥಮಿಕ ಶಾಲಾ
ಸೇವಾನಿರತ ಪದವೀಧರ ಶಿಕ್ಷಕರ ಜೇಷ್ಠತೆಯ ಸಮಸ್ಯೆ ಹಾಗೂ ಇನ್ನಿತರ ಈ ಕೆಳಕಂಡ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ಇಂದು ರಾಜ್ಯದ ಸಮಗ್ರ ಶಿಕ್ಷಣ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗದೊಂದಿಗೆ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರು ಸುಧೀರ್ಘವಾದ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಕೆ.ನಾಗೇಶ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಗಲಿ ರವರು ಮೊದಲು ರಾಜ್ಯದಲ್ಲಿ ಸುಮಾರು 30000 ಶಿಕ್ಷಕರ ವರ್ಗಾವಣೆಯನ್ನು ದೊರಕಿಸಿದ್ದಕ್ಕೆ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ 153 ಕೋಟಿ ರೂಪಾಯಿಗಳ ಶಾಲಾ ಅನುದಾನವನ್ನು ನೀಡಿದ್ದಕ್ಕಾಗಿ ಹಾಗೂ ರಾಜ್ಯದ ಸಮಸ್ತ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌ ಹಾಗೂ ಕುಡಿಯುವ ನೀರನ್ನು ಉಚಿತವಾಗಿ ನೀಡುವ ಐತಿಹಾಸಿಕ ತೀರ್ಮಾನವನ್ನು ಪ್ರಕಟಿಸಿದ್ದಕ್ಕೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿ, ಸುಮಾರು 45 ನಿಮಿಷಗಳ ಕಾಲ ಸುಧೀರ್ಘವಾಗಿ ಚರ್ಚಿಸಲಾಯಿತು.

ಚರ್ಚೆಯ ಪ್ರಮುಖ ಅಂಶಗಳು :-

  1. ಸೇವೆಯಲ್ಲಿರುವ ಪದವೀಧರ ಶಿಕ್ಷಕರನ್ನು 6 ರಿಂದ 8ಕ್ಕೆ ವಿಲೀನಗೊಳಿಸುವ ಬಗ್ಗೆ ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಲಾಯಿತು, ಪ್ರಾಥಮಿಕ ಶಾಲೆಗಳಲ್ಲಿ 15 ,20 ವರ್ಷ ಸೇವೆ ಸಲ್ಲಿಸಿದ ಪದವೀಧರ ಶಿಕ್ಷಕರ ಸೇವಾ ಜೇಷ್ಠತೆಯನ್ನು ಸಂರಕ್ಷಿಸಿ, 6 ರಿಂದ 8ಕ್ಕೆ ನಿಯುಕ್ತಿಗೊಳಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದೆಂದು
    ಶಿಕ್ಷಕರ ಸಂಘಕ್ಕೆ ಭರವಸೆ ನೀಡಿದರು.
  2. ರಾಜ್ಯಾದ್ಯಂತ ಮಧ್ಯಂತರ ರಜೆ ಹಾಗೂ ಬೇಸಿಗೆ ರಜೆಗಳಲ್ಲಾದ ವ್ಯತ್ಯಾಸವನ್ನು ಸರಿಪಡಿಸಲು ಒತ್ತಾಯಿಸಲಾಯಿತು.
  3. ನೂತನ ತಾಲ್ಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯನ್ನು ಜಿಲ್ಲಾ ಮತ್ತು ತರಬೇತಿ ಸಂಸ್ಥೆಗಳಲ್ಲಿರುವ ಹೆಚ್ಚುವರಿ ಹುದ್ದೆಗಳನ್ನು ನಿಯುಕ್ತಿಗೊಳಿಸಿ ಶೀಘ್ರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
  4. ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯ ಗುರುಗಳು ಹಾಗೂ ಹಿರಿಯ ಮುಖ್ಯಗುರುಗಳ ಹುದ್ದೆಗೆ ಹಾಗೂ ಪ್ರೌಢ ಶಾಲೆಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ನವೆಂಬರ್ ಅಂತ್ಯದಲ್ಲಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಲಾಯಿತು.
  5. ರಾಜ್ಯಾದ್ಯಂತ ಶಿಕ್ಷಕರ ವೈದ್ಯಕೀಯ ಬಿಲ್ಲುಗಳ ಮೊತ್ತವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಕ್ರೋಢೀಕರಿಸಿ, ಕಳೆದ ಸಾಲಿನಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ, ರಾಜ್ಯದ ಸಮಸ್ತ ಶಿಕ್ಷಕರಿಗೆ ಬೇಕಾದ ವೈದ್ಯಕೀಯ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಬಿಡುಗಡೆಗೊಳಿಸಲು ವಿನಂತಿಸಲಾಯಿತು.
  6. ಮುಖ್ಯ ಗುರುಗಳು ಹಾಗೂ SDMC ರವರ ಜಂಟಿ ಖಾತೆಯನ್ನು ಈ ಮೊದಲಿನಂತೆ ನಿರ್ವಹಿಸಲು ಸೂಕ್ತ ಆದೇಶ ಹೊರಡಿಸಲು ಒತ್ತಾಯಿಸಲಾಯಿತು. ಸದರಿ ವಿಷಯಕ್ಕೆ ಮಾನ್ಯ ಸಚಿವರು ಈ ಕುರಿತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಭಿಪ್ರಾಯ ಕ್ರೋಢೀಕರಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದೆಂದು ತಿಳಿಸಿದರು.
  7. ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆಯ ಕುರಿತು ಚರ್ಚಿಸಲಾಯಿತು. ಈ ಕುರಿತು ಸಮಗ್ರ ಮಾಹಿತಿಯನ್ನು ಕ್ರೋಢೀಕರಿಸಿ ಮತ್ತೊಂದು ಪ್ರಮುಖ ಸಭೆಯನ್ನು ಚರ್ಚಿಸಲಾಗುವುದೆಂದು ತಿಳಿಸಿದರು.
  8. ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಸಹ ಶಿಕ್ಷಕರ ಹುದ್ದೆಯಿಂದ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ಹೊಂದಿದಾಗ ವೇತನ ಬಡ್ತಿಗಳಲ್ಲಿ 10,15,20,25,30 ವರ್ಷಗಳ ವೇತನ ಬಡ್ತಿಯಲ್ಲಾಗುವ ವ್ಯತ್ಯಾಸಗಳ ಕುರಿತು ಕೂಡ ಮಾನ್ಯ ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಲಾಗುವುದೆಂದು ತಿಳಿಸಿದರು.
  9. ರಾಜ್ಯಾದ್ಯಂತ ಮುಂದಿನ ಶೈಕ್ಷಣಿಕ ವರ್ಷದಿಂದ ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿಯನ್ನು ಮೊದಲನೇ ಸೆಮಿಸ್ಟರ್ ನಲ್ಲಿ ನಡೆಸುವ ಬದಲಾಗಿ ಮೊದಲನೇ ಸೆಮಿಸ್ಟರ್‌ನಲ್ಲಿ ಕ್ರೀಡಾಕೂಟ ಹಾಗೂ 2ನೇ ಸೆಮಿಸ್ಟರ್ ನಲ್ಲಿ ಪ್ರತಿಭಾ ಕಾರಂಜಿಯನ್ನು ನಡೆಸಿ ಮಕ್ಕಳು ಹಾಗೂ ಶಿಕ್ಷಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಲಾಯಿತು.
  10. ತಾಲ್ಲೂಕಿಗೊಂದು ಜೂನಿಯರ್ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗಳನ್ನು ಸೃಜಿಸಿ, ದೈಹಿಕ ಶಿಕ್ಷಕರಿಗೆ ಬಡ್ತಿ ನೀಡುವುದು ಹಾಗೂ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿ ಅವರಿಗೂ ಕೂಡ ಬಡ್ತಿ ಅವಕಾಶ ಕೊಡಬೇಕೆಂದು ಒತ್ತಾಯಿಸಲಾಯಿತು.
  11. ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರ ವೈದ್ಯಕೀಯ ವೆಚ್ಚಗಳನ್ನು ಶಿಕ್ಷಕರ ಕಲ್ಯಾಣ ನಿಧಿಯ
    ನಿಯಮಗಳಂತೆ ಮಂಜೂರು ಮಾಡುವುದು ಹಾಗೂ ಶಿಕ್ಷಕರ ಸಹಪಠ್ಯ ಚಟುವಟಿಕೆಗಳನ್ನು
    ಈ ವರ್ಷ ಮುಂದುವರೆಸಬೇಕೆಂದು ಒತ್ತಾಯಿಸಲಾಯಿತು.
  12. ಶಿಕ್ಷಕರ ಸಮಾಲೋಚನಾ ಸಭೆಗಳನ್ನು ಶೈಕ್ಷಣಿಕವಾಗಿ ಹಾಗೂ ಪರಿಣಾಮಕಾರಿಯಾಗಿ
    ಜಾರಿಗೊಳಿಸಬೇಕು.
  13. ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಅಭಿಮತ ವರ್ಗಾವಣೆಯನ್ನು ಮಾಡಲು ವಿನಂತಿಸಲಾಯಿತು. ಹಾಗೂ ವಿಜಯನಗರ ಜಿಲ್ಲೆಗೆ ಜಿಲ್ಲಾ ಮತ್ತು ತರಬೇತಿ ಸಂಸ್ಥೆಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಲಾಯಿತು.

ಮಾನ್ಯ ಶಿಕ್ಷಣ ಸಚಿವರೊಂದಿಗೆ ನಡೆದ ಸುಧೀರ್ಘ ಸಭೆಯಲ್ಲಿ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರು ಕೆಲವು ಸಮಸ್ಯೆಗಳಿಗೆ ಸೂಕ್ತ ಆದೇಶವನ್ನು ಹೊರಡಿಸಲು ತಿಳಿಸಿದರು. ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀ ರಿತೇಶ್ ಕುಮಾರ್ ಸಿಂಗ್ ರವರು, ಮಾನ್ಯ ಆಯುಕ್ತರಾದ ಸನ್ಮಾನ್ಯ ಶ್ರೀಮತಿ ಬಿ.ಬಿ.ಕಾವೇರಿ ರವರು, ಪ್ರಾಥಮಿಕ ಶಿಕ್ಷಣ ನಿರ್ದೇಶಕರಾದ ಸನ್ಮಾನ್ಯ ಶ್ರೀ ಪ್ರಸನ್ನಕುಮಾರ್ ರವರು ಪ್ರೌಢ ಶಿಕ್ಷಣ ನಿರ್ದೇಶಕರಾದ ಸನ್ಮಾನ್ಯ ಶ್ರೀ ಕೃಷ್ಣಾಜಿ, ಕರಿಚೆನ್ನನವರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಕೆ.ನಾಗೇಶ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಚಂದ್ರಶೇಖರ ನುಗ್ಗಲಿ, ಉಪಾಧ್ಯಕ್ಷರಾದ ಶ್ರೀಮತಿ ಪದ್ಮಲತಾ, ಸಹ ಕಾರ್ಯದರ್ಶಿಯಾದ ಹೆಚ್‌.ಎಸ್, ಚೇತನ್, ಸಂಘಟನಾ ಕಾರ್ಯದರ್ಶಿಯಾದ ಶ್ರೀಮತಿ ಪ್ರಮೀಳಾ.ಟಿ.ಕಾಮನಳ್ಳಿ, ಚಿಕ್ಕೋಡಿ ಸಿದ್ರಾಮ.ಮ.ಲೋಕನ್ನವರ,ಬೆಂಗಳೂರು ಉತ್ತರ ಜಿಲ್ಲೆಯ ಅಧ್ಯಕ್ಷರಾದ ಗಿರೀಶ್‌, ವಿಜಯನಗರ ಜಿಲ್ಲಾಧ್ಯಕ್ಷರಾದ ಜಿಲ್ಲಾಧ್ಯಕ್ಷರಾದ ಬಸವರಾಜ ಸಂಗಪ್ಪ, ಮಂಡ್ಯ ಜಿಲ್ಲಾ ಅಧ್ಯಕ್ಷರಾದ ಜೆ.ವಾಯ್.ಮಂಜುನಾಥ್, ಕೊಡಗು ಜಿಲ್ಲಾ ಕಾರ್ಯದರ್ಶಿಯಾದ ರಮಾನಂದ AIPTF ನ ಮಹಿಳಾ ಸಂಚಾಲಕಿ ರೇಖಾ ದಳವಾಯಿ, ಹಾವೇರಿ ಜಿಲ್ಲಾ ಕಾರ್ಯದರ್ಶಿ ವಿಜಯೇಂದ್ರ ಯತ್ನಳ್ಳಿ, ಕಲಬುರ್ಗಿ ಜಿಲ್ಲೆಯ ಕಾರ್ಯದರ್ಶಿಯಾದ ಬಾಬು ಮೌರ್ಯ, ಜೇವರ್ಗಿ ತಾಲ್ಲೂಕು ಕಾರ್ಯದರ್ಶಿ ಮರೆಯಪ್ಪ ಹೊಸಮನಿ, ವಿಜಯಕುಮಾರ ಬಡಿಗೇರ, ಬೆಂಗಳೂರು ಉತ್ತರ ಜಿಲ್ಲೆಯ ನಾಗರಾಜ ಹಾಗೂ ಇತರರು ಉಪಸ್ಥಿತರಿದ್ದರು.

Sharing Is Caring:

Leave a Comment