ಬೆಂಗಳೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಹಾಗೂ ಅದರ ಅಧೀನ ಕಚೇರಿಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ವಿವಿಧ ಅನುದಾನಗಳನ್ನು ನಿಗದಿತ ಕಾಯ್ದೆ, ನಿಯಮ, ಮಾರ್ಗಸೂಚಿ ಹಾಗೂ ಸರ್ಕಾರದ ನಿರ್ದೇಶನಗಳಂತೆ ಮಾತ್ರ ಬಳಸುವಂತೆ ಇಲಾಖೆ ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅನುದಾನದ ವೆಚ್ಚಕ್ಕೆ ಸಂಬಂಧಿಸಿದ ಬಿಲ್ಗಳನ್ನು ಲೆಕ್ಕಶಾಖೆಗೆ ಸಲ್ಲಿಸುವ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಖರೀದಿ ನಿಯಮಗಳು, ತೆರಿಗೆ ಕಡಿತ, ಪ್ರಯಾಣ ಭತ್ಯೆ, ಗೌರವಧನ ಹಾಗೂ ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಸೂಚನೆಗಳನ್ನು ನೀಡಲಾಗಿದೆ.
ಖರೀದಿಗೆ ಮುನ್ನ ಆಡಳಿತಾತ್ಮಕ ಅನುಮೋದನೆ ಕಡ್ಡಾಯ
ಯಾವುದೇ ಸರಕು ಅಥವಾ ಸೇವೆಯನ್ನು ಖರೀದಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳಿಂದ ನಿಗದಿತ ಸಾಮಾನ್ಯ ವಿತ್ತಾಧಿಕಾರದ ಅನ್ವಯ ಆಡಳಿತಾತ್ಮಕ ಅನುಮೋದನೆ ಪಡೆಯಬೇಕು. ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅಗತ್ಯವಿರುವ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಪೂರ್ವಾನುಮೋದನೆ ಪಡೆಯುವುದು ಕೂಡ ಕಡ್ಡಾಯವಾಗಿದೆ.
ಖರೀದಿ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಕಾಯ್ದೆ (KTPP Act), 1999 ಹಾಗೂ ಅನ್ವಯಿಸುವ ಇತರ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
₹10 ಸಾವಿರದವರೆಗೆ ನೇರ ಖರೀದಿ; ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ದರಪಟ್ಟಿ
ಸಾದಿಲ್ವಾರು ವೆಚ್ಚದ ಕೈಪಿಡಿ-1958 ಹಾಗೂ ಕಾಲಕಾಲಕ್ಕೆ ಹೊರಡಿಸಲಾದ ಸರ್ಕಾರದ ಆದೇಶಗಳ ಪ್ರಕಾರ, ಪ್ರಸ್ತುತ ₹10,000/- ವರೆಗೆ ಮುಕ್ತ ಮಾರುಕಟ್ಟೆಯಿಂದ ನೇರವಾಗಿ ಖರೀದಿ ಮಾಡಬಹುದಾಗಿದೆ.
ಆದರೆ ₹10,000/-ಕ್ಕಿಂತ ಹೆಚ್ಚಿನ ಹಾಗೂ ₹5 ಲಕ್ಷದೊಳಗಿನ ಸರಕು ಮತ್ತು ಸೇವೆಗಳನ್ನು ಖರೀದಿಸುವಾಗ ಮಾರುಕಟ್ಟೆಯಿಂದ ಸ್ಪರ್ಧಾತ್ಮಕ ದರಪಟ್ಟಿಗಳನ್ನು (Quotations) ಆಹ್ವಾನಿಸುವುದು ಅಗತ್ಯವಾಗಿದೆ.
ಸುತ್ತೋಲೆಯಲ್ಲಿ ನೀಡಿರುವ ವಿನಾಯಿತಿಗಳ ಅನ್ವಯ ₹5 ಲಕ್ಷದವರೆಗೆ ಕೆಲವು ಖರೀದಿಗಳಿಗೆ ಟೆಂಡರ್ನಿಂದ ವಿನಾಯಿತಿ ಇದ್ದರೂ, ಖರೀದಿ ಪ್ರಕ್ರಿಯೆಯಲ್ಲಿನ ಇತರ ಕಡ್ಡಾಯ ನಿಯಮಗಳನ್ನು ನಿರ್ಲಕ್ಷಿಸಲು ಅವಕಾಶವಿಲ್ಲ.
₹5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಖರೀದಿಗಳಿಗೆ ಅನ್ವಯಿಸುವ ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ತೆರಿಗೆ ಕಡಿತದಲ್ಲೂ ಕಟ್ಟುನಿಟ್ಟಿನ ನಿಯಮ
ಸರ್ಕಾರಿ ಅನುದಾನದಿಂದ ಕೈಗೊಳ್ಳುವ ಪಾವತಿಗಳ ಸಂದರ್ಭದಲ್ಲಿ ಅನ್ವಯಿಸುವ ಶಾಸನಬದ್ಧ ತೆರಿಗೆಗಳನ್ನು ಸರಿಯಾಗಿ ಕಡಿತಗೊಳಿಸಿ ಸರ್ಕಾರಕ್ಕೆ ಜಮೆ ಮಾಡಬೇಕು.
ಆದಾಯ ತೆರಿಗೆ ಕಾಯ್ದೆಯಡಿ ತಾಂತ್ರಿಕ ಹಾಗೂ ಇತರ ಸೇವೆಗಳಿಗೆ ಅನ್ವಯಿಸುವ TDS ಹಾಗೂ ವೃತ್ತಿಪರ ಸೇವೆಗಳಿಗೆ ಅನ್ವಯಿಸುವ TDS ಅನ್ನು ಸಂಬಂಧಿತ ನಿಯಮಗಳ ಪ್ರಕಾರ ಕಡಿತಗೊಳಿಸಬೇಕು.
ಅದೇ ರೀತಿ, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಕಾಯ್ದೆ, 2017ರ ಸೆಕ್ಷನ್ 51ರ ಅನ್ವಯ ಅನ್ವಯಿಸುವ ಸಂದರ್ಭಗಳಲ್ಲಿ GST-TDS ಕಡಿತಗೊಳಿಸಬೇಕು. GST-TDS ಲೆಕ್ಕಾಚಾರ ಮಾಡುವಾಗ ತೆರಿಗೆ ಪೂರ್ವ ಮೊತ್ತವನ್ನು ಪರಿಗಣಿಸುವಂತೆ ಸೂಚಿಸಲಾಗಿದೆ.
TA ಮತ್ತು DA ಪಾವತಿಗೂ ನಿಯಮ ಪಾಲನೆ
ಸರ್ಕಾರಿ ನೌಕರರ ಪ್ರಯಾಣ ಭತ್ಯೆ (TA) ಮತ್ತು ದಿನ ಭತ್ಯೆ (DA) ಪಾವತಿಸುವಾಗ KCSR ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
KCSR ನಿಯಮ 451ರನ್ವಯ ನೌಕರರನ್ನು ಅವರ ಪ್ರವರ್ಗಗಳಾದ IA, IB, II, III ಮತ್ತು IV ಎಂದು ವರ್ಗೀಕರಿಸಲಾಗಿದ್ದು, ಆಯಾ ಪ್ರವರ್ಗಕ್ಕೆ ಅನುಗುಣವಾಗಿಯೇ ಪ್ರಯಾಣ ಸೌಲಭ್ಯ ಮತ್ತು ಭತ್ಯೆಗಳನ್ನು ಲೆಕ್ಕಹಾಕಬೇಕು.
ನೌಕರರ ಪ್ರಸ್ತುತ ಮೂಲ ವೇತನ ಅಥವಾ ವೇತನ ಶ್ರೇಣಿಯನ್ನು ಮಾತ್ರ ಆಧಾರವಾಗಿಟ್ಟುಕೊಂಡು TA/DA ಲೆಕ್ಕಹಾಕಬಾರದು. ಸರ್ಕಾರ ನಿಗದಿಪಡಿಸಿರುವ ಪ್ರವರ್ಗದ ಆಧಾರದ ಮೇಲೆ ಅರ್ಹತೆಯನ್ನು ನಿರ್ಧರಿಸಬೇಕು ಎಂದು ಸೂಚಿಸಲಾಗಿದೆ.
ಮಹಿಳಾ ನೌಕರರ ಪ್ರಯಾಣ ಭತ್ಯೆಗೆ ಟಿಕೆಟ್ ಅಗತ್ಯ
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮಹಿಳಾ ಸರ್ಕಾರಿ ನೌಕರರು ಉಚಿತ ಬಸ್ ಪ್ರಯಾಣದ ಸೌಲಭ್ಯ ಬಳಸಿಕೊಂಡಿದ್ದರೆ, ಅದೇ ಪ್ರಯಾಣಕ್ಕೆ TA ಪಡೆಯಲು ಅವಕಾಶವಿರುವುದಿಲ್ಲ.
ಪ್ರಯಾಣ ಭತ್ಯೆ ಪಡೆಯುವ ಸಂದರ್ಭದಲ್ಲಿ ಅನ್ವಯಿಸುವ ನಿಯಮಾನುಸಾರ ಟಿಕೆಟ್ ಅಥವಾ ಅಗತ್ಯ ಪ್ರಯಾಣ ದಾಖಲೆಗಳನ್ನು ಹಾಜರುಪಡಿಸುವುದು ಮುಖ್ಯವಾಗಿದೆ.
ದಿನ ಭತ್ಯೆಗೆ ಸಮಯದ ಮಿತಿ
ಕೇಂದ್ರ ಕಾರ್ಯಸ್ಥಳದಿಂದ ನೌಕರರು ಗೈರುಹಾಜರಾಗಿರುವ ಅವಧಿಯನ್ನು ಆಧರಿಸಿ ದಿನ ಭತ್ಯೆ ನೀಡಲಾಗುತ್ತದೆ.
- 6 ಗಂಟೆಗಿಂತ ಕಡಿಮೆ: ದಿನ ಭತ್ಯೆ ಇಲ್ಲ
- 6 ರಿಂದ 12 ಗಂಟೆ: ಅರ್ಧ ದಿನದ ಭತ್ಯೆ
- 12 ರಿಂದ 24 ಗಂಟೆ: ಒಂದು ದಿನದ ಪೂರ್ಣ ಭತ್ಯೆ
ಸ್ಥಳೀಯ ಪ್ರಯಾಣಕ್ಕೂ KCSR ನಿಯಮಗಳನ್ನು ಪಾಲಿಸಬೇಕು. ಕಚೇರಿಯಿಂದ ನಿಗದಿತ ಸ್ಥಳೀಯ ವ್ಯಾಪ್ತಿಯೊಳಗಿನ ಪ್ರಯಾಣಕ್ಕೆ TA/DA ಪಾವತಿಸುವ ಮೊದಲು ಸಂಬಂಧಿತ ನಿಯಮಗಳನ್ವಯ ಅರ್ಹತೆಯನ್ನು ಪರಿಶೀಲಿಸಬೇಕು.
ಸಂಪನ್ಮೂಲ ವ್ಯಕ್ತಿಗಳ ಗೌರವಧನಕ್ಕೂ ಪೂರ್ವಾನುಮೋದನೆ
ತರಬೇತಿ ಹಾಗೂ ಇತರ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಗೌರವಧನ ನೀಡುವ ಸಂದರ್ಭದಲ್ಲೂ ಕ್ರಿಯಾ ಯೋಜನೆಯಲ್ಲಿ ಪೂರ್ವಾನುಮೋದನೆ ಪಡೆಯಬೇಕು.
TA/DA ಮತ್ತು ಗೌರವಧನವನ್ನು ಪ್ರತ್ಯೇಕವಾಗಿ ಪಾವತಿಸುವ ಬದಲು, ಅನುಮೋದಿತ ಕ್ರಿಯಾ ಯೋಜನೆಯಲ್ಲಿ ಯಾವ ರೀತಿಯ ಪಾವತಿಗೆ ಅವಕಾಶ ನೀಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಪರಿಗಣಿಸಬೇಕು.
ಒಂದೇ ಕಾರ್ಯಕ್ರಮದಲ್ಲಿ TA/DA ಹಾಗೂ ಗೌರವಧನ ಎರಡನ್ನೂ ಅನಧಿಕೃತವಾಗಿ ಪ್ರತ್ಯೇಕವಾಗಿ ಪಾವತಿಸದಂತೆ ಎಚ್ಚರಿಕೆ ವಹಿಸಬೇಕು.
ಬ್ಯಾಂಕ್ ಬಡ್ಡಿಯನ್ನೂ ಸರ್ಕಾರದ ಖಾತೆಗೆ ಜಮೆ ಮಾಡಬೇಕು
ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಬ್ಯಾಂಕ್ ಖಾತೆಯಲ್ಲಿ ಇರಿಸಿದಾಗ ಅದರಿಂದ ಬಡ್ಡಿ ಬಂದರೆ ಆ ಮೊತ್ತವನ್ನು ಸಂಸ್ಥೆಯ ಸ್ವಂತ ಆದಾಯವೆಂದು ಪರಿಗಣಿಸಬಾರದು.
ಆರ್ಥಿಕ ಇಲಾಖೆಯ ಸೂಚನೆಯಂತೆ, ಯೋಜನೆ ಅಥವಾ ಕಾಮಗಾರಿಗೆ ಸಂಬಂಧಿಸಿದಂತೆ ಬ್ಯಾಂಕ್ ಖಾತೆಯಲ್ಲಿ ಉಳಿದ ಅನುದಾನದ ಮೇಲೆ ಗಳಿಸಿದ ಬಡ್ಡಿಯನ್ನು ಸಂಬಂಧಿತ ಆರ್ಥಿಕ ವರ್ಷದ ಅಂತ್ಯದಲ್ಲಿ ಸರ್ಕಾರದ ಸಂಚಿತ ನಿಧಿಗೆ ಜಮೆ ಮಾಡಬೇಕು.
ಸುತ್ತೋಲೆಯಲ್ಲಿ ಸೂಚಿಸಿರುವಂತೆ ಬಡ್ಡಿ ಮೊತ್ತವನ್ನು “0049-04-800-6-01” ಲೆಕ್ಕ ಶೀರ್ಷಿಕೆಯಡಿ ಜಮೆ ಮಾಡುವಂತೆ ತಿಳಿಸಲಾಗಿದೆ.
ಶಾಲೆಗಳು ಮತ್ತು ಕಚೇರಿಗಳಿಗೆ ಮಹತ್ವದ ಸೂಚನೆ
ಸರ್ಕಾರಿ ಅನುದಾನವು ಸಾರ್ವಜನಿಕ ಹಣವಾಗಿರುವುದರಿಂದ ಅದರ ಬಳಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಹಾಗೂ ನಿಯಮಬದ್ಧತೆ ಕಾಪಾಡುವುದು ಅತ್ಯಗತ್ಯ. ಅನುದಾನವನ್ನು ಉದ್ದೇಶಿತ ಕಾರ್ಯಕ್ಕೆ ಮಾತ್ರ ಬಳಸುವುದರ ಜೊತೆಗೆ ಪ್ರತಿಯೊಂದು ವೆಚ್ಚಕ್ಕೂ ಸಮರ್ಪಕ ದಾಖಲೆಗಳನ್ನು ನಿರ್ವಹಿಸುವುದು ಅಗತ್ಯವಾಗಿದೆ.
ಖರೀದಿ ಆದೇಶ, ಆಡಳಿತಾತ್ಮಕ ಅನುಮೋದನೆ, ಕ್ರಿಯಾ ಯೋಜನೆ, ದರಪಟ್ಟಿ/ಟೆಂಡರ್ ದಾಖಲೆಗಳು, ಸರಬರಾಜು ಬಿಲ್, ಪಾವತಿ ದಾಖಲೆ, ಸ್ಟಾಕ್ ದಾಖಲಾತಿ ಹಾಗೂ ಸಂಬಂಧಿತ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ಸಂರಕ್ಷಿಸುವುದು ಮುಂದಿನ ಲೆಕ್ಕಪರಿಶೋಧನೆ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದಾಗಿದೆ.
ನಿಯಮಾನುಸಾರ ಅನುದಾನ ಬಳಕೆ, ಸರಿಯಾದ ದಾಖಲೆ ನಿರ್ವಹಣೆ ಮತ್ತು ಪಾರದರ್ಶಕ ಲೆಕ್ಕಪತ್ರ ವ್ಯವಸ್ಥೆ ಮೂಲಕ ಸರ್ಕಾರಿ ಅನುದಾನದ ದುರ್ಬಳಕೆಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು ಎಂದು DSERT ಸೂಚಿಸಿದೆ.