ಶಾಲಾ ಮಕ್ಕಳಿಗೆ ಬೇಳೆ ಪೂರೈಕೆ ವ್ಯತ್ಯಯ: ಸ್ಥಳೀಯವಾಗಿಯೇ ಖರೀದಿಸಲು ಶಿಕ್ಷಣ ಇಲಾಖೆ ಸೂಚನೆ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಉಪಾಹಾರ ಯೋಜನೆಗೆ ತೊಗರಿ ಬೇಳೆಯ ಕೊರತೆಯಾಗದಂತೆ ತಡೆಯಲು ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಶಾಲೆಗಳ ಹಂತದಲ್ಲೇ ಸ್ಥಳೀಯವಾಗಿ ಬೇಳೆ ಖರೀದಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ.
ಗುಣಮಟ್ಟಕ್ಕೆ ಆದ್ಯತೆ: ಈ ಹಿಂದೆ ಸರಬರಾಜು ಮಾಡಲಾಗಿದ್ದ ತೊಗರಿ ಬೇಳೆಯ ಗುಣಮಟ್ಟ ಕಳಪೆಯಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಇಲಾಖೆಯು ಟೆಂಡರ್ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಉತ್ತಮ ಗುಣಮಟ್ಟದ ಬೇಳೆ ಪೂರೈಸಲು ಕ್ರಮ ವಹಿಸಿದೆ.
ರೂ. 110 ಮಿತಿ: ಇಲಾಖೆಯ ಆದೇಶದಂತೆ, ಶಾಲೆಗಳು ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಗುಣಮಟ್ಟದ ತೊಗರಿ ಬೇಳೆಯನ್ನು ಪ್ರತಿ ಕೆ.ಜಿಗೆ ಗರಿಷ್ಠ 110 ರೂಪಾಯಿ ದರದಲ್ಲಿ ಖರೀದಿಸಬಹುದಾಗಿದೆ. ಯೋಜನೆಯ ಕನ್ವರ್ಷನ್ ಕಾಸ್ಟ್ (Conversion Cost) ಅಡಿಯಲ್ಲಿ ಲಭ್ಯವಿರುವ ಹಣವನ್ನು ಇದಕ್ಕಾಗಿ ಬಳಸಿಕೊಳ್ಳಲು ಸೂಚಿಸಲಾಗಿದೆ.
ಇದರಿಂದಾಗಿ ರಾಜ್ಯದ ಪೂರ್ವ ಪ್ರಾಥಮಿಕ ಹಾಗೂ 1 ರಿಂದ 10ನೇ ತರಗತಿಯ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.