---Advertisement---

ರಾಜ್ಯ ಸರಕಾರಿ ನೌಕರರ ಸಮಾವೇಶ ಪ್ರಮುಖ ಮಾಹಿತಿ ಇಲ್ಲಿದೆ

By kspstadk.com

Published On:

Follow Us
Ksgea information
---Advertisement---
WhatsApp Group Join Now
Telegram Group Join Now

ದಿನಾಂಕ: 20-02-2025 ರಂದು ತ್ರಿಪುರವಾಸಿನಿ, ಬೆಂಗಳೂರು ಅರಮನೆ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾಯಿತ ನಿರ್ದೇಶಕರು ಹಾಗೂ ಪದಾಧಿಕಾರಿಗಳ “ಸಮಾವೇಶ ಹಾಗೂ ಕಾರ್ಯಾಗಾರ”ದ ಯಶಸ್ವಿ ಆಯೋಜನೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ದಿನಾಂಕ: 20-02-2025ನೇ ಗುರುವಾರ ಇಂದು ತ್ರಿಪುರವಾಸಿನಿ, ಅರಮನೆ ಆವರಣ, ಮೇತ್ರಿ ವೃತ್ತದ ಹತ್ತಿರ ಬೆಂಗಳೂರು ಇಲ್ಲಿ ಆಯೋಜಿಸಿದ್ದ “ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಹಾಗೂ ಜಿಲ್ಲೆ-ತಾಲ್ಲೂಕು ಮತ್ತು ಯೋಜನಾ ಶಾಖೆಗಳ ನಿರ್ದೇಶಕರು-ಪದಾಧಿಕಾರಿಗಳ “ಸಮಾವೇಶ “ಕಾರ್ಯಾಗಾರ” ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಶಾಖೆಗಳಿಂದ ಸುಮಾರು 12 ಸಾವಿರಕ್ಕೂ ಹೆಚ್ಚು ಸಂಘದ ಚುನಾಯಿತ ನಿರ್ದೇಶಕರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಸನ್ಮಾನ್ಯ ಮುಖ್ಯಮಂತ್ರಿಗಳು ವರ್ಚುಲ್ ಮೂಲಕ ಸಮಾವೇಶವನ್ನುದ್ದೇಶಿಸಿ ಮಾತನಾಡಿ

  • ನಾನು ಮುಖ್ಯಮಂತ್ರಿಯಾಗಿದ್ದ ಹಿಂದಿನ ಅವಧಿಯಲ್ಲಿ 2018ರಲ್ಲಿ 6ನೇ ವೇತನ ಆಯೋಗ ಜಾರಿಗೆ ತಂದು ಶೇಕಡಾ 30 ರಷ್ಟು ವೇತನದಲ್ಲಿ ಹೆಚ್ಚಳ ಮಾಡಿರುವುದಾಗಿ
  • ಈ ಅವಧಿಯಲ್ಲಿ 2024ರಲ್ಲಿ 7ನೇ ವೇತನ ಆಯೋಗ ಜಾರಿಗೆ ತಂದು ಶೇಕಡಾ 27.50 ರಷ್ಟು ವೇತನದಲ್ಲಿ ಹೆಚ್ಚಳ ಮಾಡಿರುವುದಾಗಿ
  • 2015ರಲ್ಲಿ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರಿಗೆ 7 ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಉದ್ದೇಶದಿಂದ ನಗದುರಹಿತ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿರುವುದಾಗಿ;

01-04-2006 ಪೂರ್ವದಲ್ಲಿ ಹೊರಡಿಸಲಾದ ನೇಮಕಾತಿ ಅಧಿಸೂಚನೆಯನ್ವಯ ಆಯ್ಕೆಯಾಗಿ ತದನಂತರದಲ್ಲಿ ಸರ್ಕಾರಿ ಸೇವೆಗೆ ಸೇರಿದ 11500 ಸರ್ಕಾರಿ ನೌಕರರನ್ನು ಹಿಂದಿನ ಡಿಫೈನ್ ಪಿಂಚಣಿಗೆ ಒಳಪಡಿಸಿ ಆದೇಶ ಹೊರಡಿಸಿರುವುದಾಗಿ;

  • ಸಮಗ್ರ ಸಂಬಳ ಪ್ಯಾಕೇಜ್ ಖಾತೆ ತೆರೆಯುವ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ರೂ. 1.00 ಕೋಟಿ ವಿಮಾ ಮೊತ್ತ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ-ಸೌಲಭ್ಯ ಸೇರಿದಂತೆ ನೌಕರರ ಹಿತಾಸಕ್ತಿ ರಕ್ಷಿಸುವಂತಹ ಯೋಜನೆಯನ್ನು ಜಾರಿಗೆ ತರುವ ಉದ್ದೇಶದಿಂದ ಈಗಾಗಲೆ ಸಚಿವ ಸಂಪುಟದ ಅನುಮೋದನೆ ಪಡೆದಿದ್ದು, ಶೀಘ್ರ ಸರ್ಕಾರಿ ಆದೇಶ ಹೊರಡಿಸುವುದಾಗಿ ತಿಳಿಸಿದರು.

ಸಂಘದ ಪ್ರಮುಖ ಬೇಡಿಕೆಗಳಾದ:

  1. “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (ಕೆ.ಎ.ಎಸ್.ಎಸ್)ಅನುಷ್ಠಾನಗೊಳಿಸುವುದು
  • ರಾಜ್ಯ ಸರ್ಕಾರಿ ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (ಕೆ.ಎ.ಎಸ್.ಎಸ್)ಗೆ 2022 ರಲ್ಲಿ ಸರ್ಕಾರವು ಅನುಮೋದಿಸಿದ್ದು, ಸರ್ಕಾರಿ ಆದೇಶವನ್ನು ಹೊರಡಿಸಿರುತ್ತದೆ. ತಾಂತ್ರಿಕ ಕಾರಣದಿಂದ ಈ ಯೋಜನೆ ಅನುಷ್ಠಾನಗೊಳ್ಳದೆ ಬಾಕಿಯಿದ್ದು, ಅತಿ ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದಾಗಿ ತಿಳಿಸಿದರು.
  1. ಎನ್.ಪಿ.ಎಸ್ ರದ್ದುಪಡಿಸಿ ಓ.ಪಿ.ಎಸ್ ಜಾರಿ
  • ಸಂಘದ ಮನವಿಯಂತೆ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ನೀಡಿದ ಭರವಸೆಯಂತೆ ರಚಿಸಲಾಗಿದ್ದ ಎನ್.ಪಿ.ಎಸ್ ಸಮಿತಿ ಅಂತಿಮ ಸಭೆ ನಡೆಸಿದ್ದು, ಶೀಘ್ರದಲ್ಲಿಯೇ ವರದಿ ಪಡೆದು, ಸಮಿತಿಯವರು ನೀಡುವ ವರದಿಯನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಹಾಗೂ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಓ.ಪಿ.ಎಸ್ ಜಾರಿಗೊಳಿಸಲು ಕ್ರಮಕೈಗೊಳ್ಳಲಾಗುವುದಾಗಿ ತಿಳಿಸಿದರು.

ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದ್ದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ನಮ್ಮ ಸರ್ಕಾರ ಬದ್ಧವಾಗಿರುವುದಾಗಿ ತಿಳಿಸಿ ಸಮಾವೇಶ ಯಶಸ್ವಿಯಾಗಿ ಜರುಗಲೆಂದು ಶುಭಹಾರೈಸಿದರು.

ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀಯುತ ಡಿ.ಕೆ. ಶಿವಕುಮಾರ್‌ರವರಿಂದ ಸಮಾವೇಶದ ಉದ್ಘಾಟನೆ

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು;

  • ಸನ್ಮಾನ್ಯ ಮುಖ್ಯಮಂತ್ರಿಗಳು ವರ್ಚುವಲ್ ಮೂಲಕ ತಮ್ಮೊಟ್ಟಿಗೆ ಮಾತನಾಡಿ ಈ ಸಮಾವೇಶದಲ್ಲಿ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿರುವುದಾಗಿ ನನಗೆ ತಿಳಿಸಿರುವ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
  • ನಾನೂ ಕೂಡ ಒಬ್ಬ ಸರ್ಕಾರಿ ನೌಕರನಾಗಿದ್ದು, ಸರ್ಕಾರಿ ನೌಕರರು ಕಾರ್ಯಾಂಗದ ಭಾಗವಾಗಿ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಹಾಗೂ ಶ್ರೀಸಾಮಾನ್ಯರಿಗೆ ಸರ್ಕಾರದ ಯೋಜನೆಗಳನ್ನು ಮುಟ್ಟಿಸುವಲ್ಲಿ ನಿಮ್ಮ ಪಾತ್ರ ಮಹತ್ತರವಾಗಿದೆ ಎಂಬುದು ನಮ್ಮ ಗಮನದಲ್ಲಿದೆ ಎಂದರು.
  • ನಾನು ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷನಾಗಿದ್ದು, ನಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ವಿಷಯಗಳು ನಮಗೆ ತಿಳಿದಿದ್ದು, ಈಗಾಗಲೇ ಪ್ರಣಾಳಿಕೆಯಲ್ಲಿನ ಹಲವು ಅಂಶಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ. ಅದರಂತೆಯೇ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ನಮ್ಮ ಸರ್ಕಾರದ ಬದ್ಧವಾಗಿದೆ. ನಮ್ಮ ಮೇಲೆ ನಂಬಿಕೆ ಇಡಿ ಎಂದರು.
  • ಸರ್ಕಾರದಿಂದ ಜಾರಿಯಾಗಿರುವ ಪಂಚ ಯೋಜನೆಗಳನ್ನು ಸರ್ಕಾರಿ ನೌಕರರು ಜನಸಾಮಾನ್ಯರಿಗೆ ಸಮಪರ್ಕವಾಗಿ ಕಾರ್ಯಗತಗೊಳಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
  • ರಾಜ್ಯ ಸರ್ಕಾರಿ ನೌಕರರಾದ ತಮಗೆ ಸುಧೀರ್ಘ 30-35 ವರ್ಷಗಳ ಕಾಲ ಶ್ರೀಸಾಮಾನ್ಯರ ಸೇವೆ ಸಲ್ಲಿಸುವ ಅವಕಾಶ ದೊರಕಿರುವುದು ತಮ್ಮ ಸುದೈವವೆಂದು ಭಾವಿಸಿ ಎಂದರು.
  • ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರು ನಗರದಲ್ಲಿ ನಿವೇಶನ ಹಾಗೂ ಅಗತ್ಯ ಅನುದಾನ ನೀಡುವ ಭರವಸೆ ನೀಡಿ, ಬೆಂಗಳೂರು ನಗರದಲ್ಲಿ ಖಾಲಿ ನಿವೇಶನವನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
  • ಕಾರ್ಯಾಂಗದ ಅವಿಭಾಜ್ಯ ಅಂಗವಾಗಿರುವ ರಾಜ್ಯ ಸರ್ಕಾರಿ ನೌಕರರು ಸರ್ಕಾರದ ಧೈಯೋದ್ದೇಶಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಬೆಳಿಗ್ಗೆ 10.30 ಗಂಟೆಗೆ ‘ಪ್ರಜಾಸ್ನೇಹಿ ಆಡಳಿತ ಕಾರ್ಯಾಗಾರದಲ್ಲಿ;

‘ಆಡಳಿತದಲ್ಲಿ ದಕ್ಷತೆ-ಪಾರದರ್ಶಕತೆ-ಪ್ರಾಮಾಣಿಕತೆ’ ವಿಷಯ ಕುರಿತಂತೆ ಮಾನ್ಯ ಕರ್ನಾಟಕ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಬಿ.ಎಸ್. ಪಾಟೀಲ್‌ ರವರು ಲೋಕಾಯುಕ್ತ ಸಂಸ್ಥೆಯ ಕರ್ತವ್ಯದ ಬಗ್ಗೆ ಮಾತನಾಡಿ,

  • ರಾಜ್ಯ ಸರ್ಕಾರಿ ನೌಕರರು ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನದ ಮೂಲ ಆಶಯಗಳು ಹಾಗೂ ನಾಗರೀಕ ಸೇವಾ ನಿಯಮಗಳಡಿಯಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು. ಸಂವಿಧಾನದ ಆಶಯಗಳು ಹಾಗೂ ನಾಗರೀಕ ಸೇವಾ ನಿಯಮಗಳಿಗೆ ವ್ಯತಿರಿಕ್ತವಾಗಿ ಕರ್ತವ್ಯ ನಿರ್ವಹಿಸಿದಲ್ಲಿ ತನಿಖಾ ಸಂಸ್ಥೆಗಳು ಅನಿವಾರ್ಯವಾಗಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದರು.
  • ಈ ಯಾವುದೇ ಅಂಗಳಿಗೆ ಚ್ಯುತಿ ಬಾರದಂತೆ ತಮ್ಮ ಕಚೇರಿಗಳಿಗೆ ಸೇವೆ ಬಯಸಿ ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ಸ್ಪಂದಿಸಿ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಸೇವೆಯನ್ನು ನೀಡುವುದು ಸರ್ಕಾರಿ ನೌಕರರ ಆದ್ಯ ಕರ್ತವ್ಯವಾಗಿದೆ ಎಂದರು.
  • ಕರ್ತವ್ಯ ನಿರ್ವಹಣೆ ಸಮಯದಲ್ಲಿ ಯಾವುದೇ ಒತ್ತಡ, ಆಮಿಷ, ಪ್ರಲೋಭಗಳಿಗೆ ಒಳಗಾಗದಂತೆ ಕಿವಿಮಾತು ಹೇಳಿದರು.
  • ಸರ್ಕಾರಿ ಸೇವೆಯನ್ನು ದೇವರ ಕೆಲಸವೆಂದು ತಿಳಿದು ಅತ್ಯಂತ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿದಲ್ಲಿ ನಮ್ಮ ಸಂಸ್ಥೆಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ.
  • ಸರ್ಕಾರಿ ನೌಕರರು ಕರ್ತವ್ಯ ನಿರ್ವಹಣೆಯಲ್ಲಿ; ಸಿಬ್ಬಂದಿಗಳ ಕೊರತೆ, ಅಧಿಕ ಕೆಲಸದ ಒತ್ತಡ, ಮೂಲಭೂತ ಸೌಲಭ್ಯಗಳ ಕೊರತೆ ಮೊದಲಾದ ಅಂಶಗಳ ಬಗ್ಗೆ ತನಿಖಾB ಸಂಸ್ಥೆಗೆ ತಿಳಿದಿದ್ದು, ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ತಿಳಿಸಿದರು.
  • ಎಲ್ಲಾ ಹಂತದ ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ತಮ್ಮ ಕರ್ತವ್ಯಗಳನ್ನು ದಕ್ಷತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸುವ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಮತ್ತು ಗೌರವವನ್ನು ಪಡೆಯುವಂತೆ ತಿಳಿಸಿದರು.

‘ಮಾಹಿತಿ ಹಕ್ಕು ಅಧಿನಿಯಮ(2005) ಹವಾಲುಗಳು-ಪರಿಹಾರಗಳು’ ವಿಷಯ ಕುರಿತಂತೆ ರಾಜ್ಯ ಮಾಹಿತಿ ಆಯೋಗ, ಕಲಬುರಗಿ ಪೀಠದ ಆಯುಕ್ತರಾದ ಶ್ರೀ ರವೀಂದ್ರ ಗುರುನಾಥ ಧಾಕಪ್ಪ ರವರು ಮಾತನಾಡಿ;

ಮಾಹಿತಿ ಹಕ್ಕು ಅಧಿನಿಯಮದ ಮೂಲ ಉದ್ದೇಶ, ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿಗಳನ್ನು ನೀಡುವುದಾಗಿರುತ್ತದೆ.

  • ಸರ್ಕಾರಿ ನೌಕರರು ಈ ಅಧಿನಿಯಮದ ಎಲ್ಲಾ ನಿಯಮಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಅರ್ಥಮಾಡಿಕೊಂಡಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಕರ್ತವ್ಯ ನಿರ್ವಹಿಸುವುದು ಅತ್ಯಂತ ಸುಲಭವಾಗಲಿದೆ ಎಂದರು.
  • ಇಲಾಖೆಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸೇರಿದಂತೆ ಇನ್ನಿತರೆ ತನಿಖಾ ಸಮಿತಿಗಳ ಮಾದರಿಯಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಕರ್ತವ್ಯ ನಿರ್ವಹಣೆಯಲ್ಲಾಗುವ ತೊಂದರೆಗಳನ್ನು ನಿವಾರಿಸಲು ಇಲಾಖೆಗಳಲ್ಲಿ ಪ್ರತ್ಯೇಕವಾಗಿ ಒಂದು ಸಮಿತಿಯನ್ನು ರಚಿಸುವುದು ಅವಶ್ಯವಿದ್ದು, ಈ ಸಂಬಂಧ ತಮ್ಮ ಸಂಘಟನೆಯಿಂದ ಸರ್ಕಾರದ ಗಮನ ಸೆಳೆಯಲು ತಿಳಿಸಿದರು.
  • ಮಾಹಿತಿ ಹಕ್ಕು ಅಧಿನಿಯಮದಡಿ ಸರ್ಕಾರಿ ನೌಕರರ ವೈಯಕ್ತಿಕ ಮಾಹಿತಿಗಳನ್ನು ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಮಾಹಿತಿಯನ್ನು ಕೋರಲು ಅವಕಾಶವಿರುವುದಿಲ್ಲ. ಈ ವಿಷಯ ವಾಗಿ ಅಧಿನಿಯಮಕ್ಕೆ Digital Personal Data Protection Act-2023 ರಲ್ಲಿ (DPDP) ತಿದ್ದುಪಡಿ ತಂದಿರುವುದಾಗಿ ತಿಳಿಸಿದರು.
  • ಮಾಹಿತಿ ಹಕ್ಕು ಅಧಿನಿಯಮ ಪಾಲನೆ ಉಲ್ಲಂಘನೆ ಸಂಬಂಧ ವಿಧಿಸಲಾಗುವ ದಂಡದ ಮೊತ್ತವನ್ನು ನೌಕರರು ವೈಯಕ್ತಿವಾಗಿ ಪಾವತಿಸುವಂತಿಲ್ಲ. ಬದಲಾಗಿ ಸಂಬಂಧಿಸಿದ ಇಲಾಖೆಯಿಂದಲೇ ಭರಿಸಬೇಕಾಗಿದೆ ಎಂದರು.
  • ಮಾಹಿತಿ ಹಕ್ಕು ಅಧಿನಿಯಮದ ಉಲ್ಲಂಘನೆಗೆ ನೌಕರರ ಮೇಲೆ ವಿಧಿಸಲಾಗುವ ದಂಡಕ್ಕೆ ಸಂಬಂಧಿಸಿದಂತೆ; ಆ ನೌಕರರ ವೇತನ ಬಡ್ತಿ, ಪದೋನ್ನತಿ ಸೇರಿದಂತೆ ಇನ್ನಾವುದೇ ಸೇವಾ ಸೌಲಭ್ಯಗಳಿಗೆ ಅಡಚಣೆ ಮಾಡಬಾರದೆಂದು ಮಾನ್ಯ ಉಚ್ಚ ನ್ಯಾಯಾಲಯವು ಆದೇಶ ನೀಡಿರುವುದಾಗಿ ತಿಳಿಸಿದರು.
  • ಮಾಹಿತಿ ಹಕ್ಕು ಅಧಿನಿಯಮ-2005 ಹಾಗೂ ಮಾಹಿತಿ ಆಯೋಗದ ನಿಯಮಗಳನ್ನು ಅಧ್ಯಯನ ಮಾಡಿ ಮಾಹಿತಿ ಹಕ್ಕು ಅರ್ಜಿಗಳಿಗೆ ಉತ್ತರ ನೀಡುವುದರಿಂದ ಸರ್ಕಾರಿ ನೌಕರರು ಯಾವುದೇ ತೊಂದರೆಯಿಲ್ಲದೆ ನಿರ್ಭೀತಿಯಿಂದ ಸುಗಮವಾಗಿ ನಿರ್ವಹಿಸಬಹುದಾಗಿದೆ ಎಂದು ಸಲಹೆ ನೀಡಿದರು.
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Related Posts

Leave a Comment