ಶಿಕ್ಷಣ ಇಲಾಖೆಯ ಪರ್ಯಾಯ ಶೈಕ್ಷಣಿಕ ಯೋಜನೆಯಾದ ವಿದ್ಯಾಗಮದ ಅನುಷ್ಠಾನದಲ್ಲಿ 62% ವಿದ್ಯಾರ್ಥಿಗಳ ಹಾಜರಿಯೊಂದಿಗೆ ದಕ್ಷಿಣಕನ್ನಡ ಜಿಲ್ಲೆ ರಾಜ್ಯದಲ್ಲೇ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಶಿಕ್ಷಕರ ಅವಿರತ ಪ್ರಯತ್ನ ಹಾಗೂ ಪೋಷಕರ, ವಿದ್ಯಾರ್ಥಿಗಳ ಉತ್ಸಾಹದ ಫಲವಾಗಿ ಜಿಲ್ಲೆಗೆ ಈ ಗೌರವ ಸಂದಿದೆ. ವಿಜಯಪುರ ಜಿಲ್ಲೆ ರಾಜ್ಯದಲ್ಲೇ ಕನಿಷ್ಠ ಹಾಜರಾತಿ ಪ್ರಮಾಣ 19% ದಾಖಲಿಸಿದೆ. ಒಟ್ಟಾರೆ ರಾಜ್ಯದ ಹಾಜರಾತಿ ಪ್ರಮಾಣ 42% ದಷ್ಟಿದೆ. ಒಂದು ತಿಂಗಳ ಹಿಂದೆ 6,7 ಹಾಗೂ 8ನೇ ತರಗತಿಗಳಿಗೆ ಪೂ.10 ಗಂಟೆಯಿಂದ 12.30 ರವರೆಗೆ ವಿದ್ಯಾಗಮ ಯೋಜನೆಯಡಿ ಶಾಲಾವರಣದಲ್ಲಿ ಪಾಠಬೋಧನೆಗೆ ಅವಕಾಶ ಕಲ್ಪಿಸಲಾಗಿತ್ತು. ಮಂಗಳೂರು ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಮಲ್ಲೇಸ್ವಾಮಿಯವರ ಹೇಳಿಕೆ ಪ್ರಕಾರ ಸರಕಾರಿ ಶಾಲೆಗಳ 90ಶೇಕಡಾಕ್ಕೂ ಅಧಿಕ ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ. ಖಾಸಗೀ ಶಾಲೆಗಳಲ್ಲಿ ಈ ಪ್ರಮಾಣ 80%ದ ಆಸುಪಾಸಿನಲ್ಲಿದೆ. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಲೋಕೇಶ್ ಸಿ ಇವರು ಹೇಳುವಂತೆ ಖಾಸಗಿ ಶಾಲೆಗಳ ಮಕ್ಕಳು ಆನ್ಲೈನ್ ತರಗತಿಗಳನ್ನು ಬಳಸಲು ಹೆಚ್ಚು ಶಕ್ತರಾಗಿದ್ದಾರೆ, ಆದರೆ ಸರಕಾರಿ ಶಾಲೆಯ ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕಳುಹಿಸಲು ಹೆಚ್ಚು ಒಲವು ತೋರುತ್ತಿದ್ದಾರೆ. ಶಾಲೆಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಅತ್ಯುತ್ತಮವಾಗಿ ಪಾಲನೆ ಮಾಡುತ್ತಿರುವುದರಿಂದ ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಕಳುಹಿಸಲು ಉತ್ಸಾಹ ತೋರುತ್ತಿದ್ದಾರೆ, ಈ ಯಶಸ್ಸಿನ ಪಾಲು ಶಿಕ್ಷಕರ ಪ್ರಯತ್ನ ಹಾಗೂ ಪೋಷಕರ ನಂಬಿಕೆಗೆ ಸಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.